“..ಏನಾಗಬೇಕು ಅಂದ್ರೆ ಮಾನವನಾಗಬೇಕು ಅಂತಾರೆ. ಹಾಗಿದ್ರೆ ನಾವೇನು ದನಗಳಾ? ಮಾನವರಾಗಿ ಹುಟ್ಟಿ ಆಗಿದೆ. ಮಾನವರು ದೇವರಾಗ್ಬೇಕು.. ಕೆಲವು ಸಾಹಿತಿಗಳು ಬರೆಯೋ ಸಾಹಿತ್ಯಕ್ಕೆ ತುದಿಯೂ ಇರಲ್ಲ ಬುಡವೂ ಇರಲ್ಲ.. ಗೌರ್ನಮೆಂಟು ಸೈಟಿಗಾಗಿ ಏನೇನೋ ಬರೀತಾರೆ..”
❍ ರವಿ ದೇವಳಿ
ಇದಿಷ್ಟು
ಈಗ ವಿವಾದ ‘ಎಬ್ಬಿಸಿರುವ’ ಸಚಿವ ಅನಂತಕುಮಾರ ಹೆಗಡೆಯವರ ಭಾಷಣದ ತುಣುಕು. ಮೇಲ್ನೋಟಕ್ಕೆ ಅನಂತಕುಮಾರ ಹೆಗಡೆ ಸಾಹಿತಿಗಳನ್ನ ಅವಮಾನಿಸಿದಾರೆ ಅನಿಸಿದರೂ, ಆತ ಹೇಳಿದ್ದರಲ್ಲಿ ಬಹುತೇಕ ಸತ್ಯವಿದೆ.
ಆಕಾಶದಿಂದ ಉದುರಿಬಿದ್ದವರಲ್ಲ..
ಮೊದಲ್ನೇದಾಗಿ
ಸಾಹಿತಿಗಳೂ ನಾಗರೀಕರೇ, ಅದಕ್ಕಿಂತ ಮುಖ್ಯವಾಗಿ ಮನುಷ್ಯರೇ ಆಗಿರೋದ್ರಿಂದ ಅವರಿಗೂ ಬಲಹೀನತೆಗಳು ಇದ್ದೇ ಇವೆ. ಹಾಗಾಗಿ ಅವರನ್ನು ‘ಮುಗಿಲ ನಕ್ಷತ್ರ’ಗಳಂತಾಗಲೀ, ಪರಿಶುದ್ಧರು-ಪ್ರಶ್ನಾತೀತರು ಅಂತಾಗಲೀ ಪರಿಭಾವಿಸುವುದೇ ತಪ್ಪು. ತಮ್ಮ ಬರಹ ಮತ್ತು ಬದುಕು ಎರಡರ ಮಧ್ಯೆ ಅನೇಕ ಸಾಹಿತಿಗಳು ಸಾಮ್ಯ ಇಟ್ಟುಕೊಂಡಿಲ್ಲ ಎನ್ನುವುದೂ ಲೋಕಕ್ಕೆ ಗೊತ್ತಿರುವ ಸಂಗತಿಯೇ.
ಒಂದೆರಡು
ಉದಾಹರಣೆ ನೋಡಿ; ದಲಿತ ಚಳವಳಿಯ ಪ್ರಖರ ಬೆಳಕಿನಂತಿದ್ದ, ಒಂದು ಕಾಲಕ್ಕೆ ತಮ್ಮ ಬರವಣಿಗೆಯಿಂದ ಸತ್ತಂತಿದ್ದ ಜಗತ್ತನ್ನ ಬೆಚ್ಚಿಬೀಳಿಸಿದ್ದ ಸಾಹಿತಿ ಸಿದ್ದಲಿಂಗಯ್ಯ. ಸರ್ಕಾರದಿಂದ ಸಕಲ ಸವಲತ್ತುಗಳನ್ನೂ ಪಡೆದದ್ದೂ ಅಲ್ಲದೆ, ಸಾರ್ವಜನಿಕ ಸಮಾರಂಭವೊಂದರಲ್ಲಿ ಮಾಜಿ ಸಿಎಂ ಯಡಿಯೂರಪ್ಪನವರನ್ನು ‘ಆಧುನಿಕ ಬಸವಣ್ಣ’ ಅಂತ ಘೋಷಿಸಿಬಿಟ್ಟರು! ಎಲ್ಲಿಯ ಯಡಿಯೂರಪ್ಪ? ಎಲ್ಲಿಯ ಬಸವಣ್ಣ!
ಇತ್ತೀಚಿಗೆ
ಮೈಸೂರಿನಲ್ಲಿ ನಡೆದ ಸಾಹಿತ್ಯ ಸಮಾರಂಭಕ್ಕೆ ಸಂಬಂಧಿಸಿ ಜನರ ಮನಸ್ಸಿನಲ್ಲಿ ಏನಾದರೂ ಉಳಿದಿದೆ ಅಂದರೆ ಅದು ಕೊಚ್ಚೆ ಮತ್ತು ಉಚ್ಚೆ! ಇವೆರಡಕ್ಕೂ ಮೂಲ ಕಾರಣ ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಟೀಲರು. ತಮ್ಮ ಭಾಷಣದಲ್ಲಿ “ಜಾತ್ಯಾತೀತ ‘ರಾಷ್ಟ್ರೀಯ’ ಪಕ್ಷವನ್ನೇ ಆಯ್ಕೆ ಮಾಡಬೇಕು” ಎಂಬ ಕರೆಯ ಮೂಲಕ ಜನರ ಓಟು ಅಪ್ಪಿ ತಪ್ಪಿಯೂ ಪ್ರಾದೇಶಿಕ ಅಥವಾ ಕೋಮುವಾದಿ ಪಕ್ಷಗಳಿಗೆ ಹೋಗಬಾರದು ಎಂಬ ಠರಾವು ಹೊರಡಿಸಿದರು! ಹಿಂದೆ ಆಸ್ಥಾನಗಳಲ್ಲಿ ರಾಜರನ್ನು ಯದ್ವಾತದ್ವಾ ಹೊಗಳಿ ಭಕ್ಷೀಸು ಗಿಟ್ಟಿಸುತ್ತಿದ್ದ ಭಟ್ಟಂಗಿ ಸಾಹಿತಿಗಳು ಈಗಲೂ ಇದ್ದಾರೆ ಎಂಬುದಕ್ಕೆ ಇವೆರಡು ಉದಾಹರಣೆ ಸಾಲದೇ? ‘ಸೈಟಿಗಾಗಿ ಸಾಹಿತಿಗಳು’ ಎಂಬ ಅನಂತಕುಮಾರ ಹೆಗಡೆ ಮಾತಿನಲ್ಲಿ ತಪ್ಪೇನಿದೆ?
ಮೀಡಿಯಾ ‘ವಿವಾದ’
‘ಕವಿ ಕುವೆಂಪುರಿಗೆ ಅವಮಾನ ಮಾಡಿದ ಹೆಗಡೆ’ ಅಂತ ಕೆಲವು ಮಾಧ್ಯಮಗಳಲ್ಲಿ ಬ್ರೇಕಿಂಗ್ ನ್ಯೂಸು ಬಿತ್ತರವಾಯಿತು. ಅಸಲಿಗೆ ಕುವೆಂಪು ಅವರ ಯಾವ ಸಾಹಿತ್ಯದ ಬಗ್ಗೆ ಅವಮಾನ ಮಾಡಲಾಗಿದೆ? ಅದು ಪದ್ಯವೋ ಗದ್ಯವೋ? ಅದರ ಒಂದೆರಡು ಸಾಲು ಹೇಳ್ತೀರಾ..? ಅಂತ ಕೇಳಿ ನೋಡಿ. ಮೀಡಿಯಾಗಳ ಬಾಯಿ ಬಂದ್ ಆಗುತ್ತದೆ! ಅವರಿಗಿರುವ ಸಾಹಿತ್ಯದ ನಾಲೇಜು ಅಷ್ಟೇ.
ಅಸೂಕ್ಷ್ಮಅನಂತಕುಮಾರ
ಅಂದಹಾಗೆ ‘ಮೊದಲು ಮಾನವನಾಗು’ ಎಂಬುದು ಕುವೆಂಪು ಬರಹವಲ್ಲ, ಅದು ಸಿದ್ದಯ್ಯ ಪುರಾಣಿಕರ ಪ್ರಸಿದ್ಧ ಕವಿತೆ. ಅದರ ಮೊದಲ ಚರಣ ಹೀಗಿದೆ;
ಓದಿ
ಬ್ರಾಹ್ಮಣನಾಗು ಕಾದಿ ಕ್ಷತ್ರಿಯನಾಗು
ಶೂದ್ರ
ವೈಶ್ಯನೆ ಆಗು ದುಡಿದು ಗಳಿಸಿ
ಏನಾದರೂ
ಆಗು ನಿನ್ನೊಲವಿನಂತಾಗು
ಏನಾದರೂ
ಸರಿಯೆ, ಮೊದಲು ಮಾನವನಾಗು
ಇದನ್ನೇ ಅನಂತಕುಮಾರ ಹೆಗಡೆ, ಮಾತಿನ ಓಘದಲ್ಲಿ ಉಲ್ಲೇಖಿಸಿದ್ದಾರೆ. ಇದು ಸಿದ್ದಯ್ಯ ಪುರಾಣಿಕರ ಕವಿತೆಯ ಸಾಲು ಅನ್ನೋದಾಗಲೀ, ಮನುಷ್ಯನಾಗಿ ಹುಟ್ಟಿಯೂ ರಾಕ್ಷಸರಂತೆ ವರ್ತಿಸುವ ಜನ ಮಾನವೀಯರಾಗಬೇಕು ಎಂಬ ಸಂದೇಶವಾಗಲೀ ಅನಂತಕುಮಾರ ಹೆಗಡೆಯವರಿಗೆ ಗೊತ್ತಿರುವುದು ಸಂಶಯ. ಯಾಕಂದ್ರೆ ಆ ಸೂಕ್ಷ್ಮತೆ ಇದ್ದಿದ್ದರೆ ಅವರ ಪಬ್ಲಿಕ್ ಇಮೇಜು ಇವತ್ತು ಇಷ್ಟು ಹದಗೆಡುತ್ತಿರಲಿಲ್ಲ!❍ ರವಿ ದೇವಳಿ

No comments:
Post a Comment